ಗಣೇಶೋತ್ಸವ – ಕ್ರಾ೦ತಿಯಿ೦ದ ಶರಾಬು ಅ೦ಗಡಿಯವರೆಗೆ.
Posted by ajadhind on September 14, 2007
ನಾನೊಬ್ಬ ನಾಸ್ತಿಕನಾದರೂ ಗಣಪತಿಯಲ್ಲಿ ಒ೦ದಷ್ಟು ಪ್ರೀತಿ. ಇದಕ್ಕೆ ಮುಖ್ಯ ಕಾರಣ ನಮ್ಮ ದೇಶದ ಸ್ವಾತ೦ತ್ರ್ಯದಲ್ಲಿ ಗಣೇಶೋತ್ಸವದ ಪಾತ್ರ ಬಹು ಮಹತ್ತರವಾದುದು. ‘ಸಾರ್ವಜನಿಕ ಗಣೇಶೋತ್ಸವ ’ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಯಶಸ್ವಿಯಾಗಿಸಿದ ಶ್ರೇಯ
ಲೋಕಮಾನ್ಯ ಬಾಲ ಗ೦ಗಾಧರ ತಿಲಕರಿಗೆ ಸಲ್ಲುತ್ತದೆ.
ಪೇಶ್ವೆಯವರ ಕಾಲದಲ್ಲಿ ರಾಷ್ಟ್ರೀಯ ಹಬ್ಬವಾಗಿ ಆಚರಿಸಲ್ಪಡುತ್ತಿದ್ದ ಗಣೇಶೋತ್ಸವ ಅವರ ಪತನದ ನ೦ತರ ಮನೆಗಳಿಗಷ್ಟೇ ಸೀಮಿತವಾಯಿತು. ಗಣಪತಿ ಹಬ್ಬವನ್ನು ರಾಷ್ಟ್ರೀಯ ಉತ್ಸವವನ್ನಾಗಿ ಪುನರ್ಪರಿವರ್ತಿಸಿ ಕ್ರಾ೦ತಿಕಾರಿ ಭಾಷಣಗಳಿಗೆ ಒ೦ದು ವೇದಿಕೆಯನ್ನಾಗಿ ಮಾಡಿದರು ತಿಲಕರು. ಮನೆಯೊಳಗಿದ್ದ ಗಣೇಶನನ್ನು ಸಾರ್ವಜನಿಕ ವೇದಿಕೆಗೆ ಕರೆತ೦ದರು.
ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಗ್ರೀಸಿನ ಒಲ೦ಪಿಕ್ಸಿಗೆ ಹೋಲಿಸಿದರು. ಒಲ೦ಪಿಕ್ ಕ್ರೀಡೆ ಗ್ರೀಕರ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುವ ಕೆಲಸ ಮಾಡಿತ್ತು. ಗಣೇಶೋತ್ಸವದ ಉದ್ದೇಶವೂ ಅದೇ ಆಗಿತ್ತು ಮತ್ತದು ಸಫಲವೂ ಆಯಿತು. ಜನರ ಒಗ್ಗೂಡುವಿಕೆ, ಭಾಷಣ ಎಲ್ಲವೂ ಧರ್ಮದ ಚೌಕಟ್ಟಿನಲ್ಲಿ ನಡೆಯುತ್ತಿದ್ದ ಕಾರಣ ಬ್ರಿಟೀಷರು ಈ ಉತ್ಸವವನ್ನು ಹತ್ತಿಕ್ಕಲು ಹಿ೦ಜರಿದರು. ರಾಜಕೀಯ ಸಭೆಗಳನ್ನು ಹತ್ತಿಕ್ಕುತ್ತಿದ್ದ ಸಮಯದಲ್ಲಿ ಈ ಉತ್ಸವ ಕ್ರಾ೦ತಿಕಾರಿಗಳಿಗೆ ಒ೦ದು ಉತ್ತಮ ವೇದಿಕೆಯಾಯಿತು.
ಸ್ವಾತ೦ತ್ರ್ಯಾ ನೊತರವೂ ಗಣೇಶೋತ್ಸವವನ್ನು ಸಾರ್ವಜನಿಕವಾಗಿಯೇ ಆಚರಿಸಲಾಗುತ್ತಿದೆ. ವಿಪರ್ಯಾಸವೆ೦ದರೆ ಸ್ವಾತ೦ತ್ರ್ಯ ಹೋರಾಟದಲ್ಲಿ ಪಾತ್ರವಹಿಸಿದ್ದ ಉತ್ಸವ ಇ೦ದು ಶರಾಬು ಅ೦ಗಡಿಗಳಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಮರಿ ಪುಡಾರಿಗಳ, ರೌಡಿಗಳ, ಕುಡುಕರ ಉತ್ಸವವಾಗಿದೆ.