ಕರೆ೦ಟೂ, ವಾಟರ್ರೂ, ಪೊಲಿಟಿಕ್ಸೂ……….
Posted by ajadhind on September 19, 2007
ಸಾವಿರಾರು ಜನ ಸೇರಿದ್ದರಲ್ಲಿ. ರೈತರ ಸ೦ಖ್ಯೆ ಅಧಿಕವಾಗಿತ್ತು. ಒ೦ದಷ್ಟು ಸ೦ಘಗಳ ಕಾರ್ಯಕರ್ತರಿದ್ದರು. ಉತ್ಸಾಹಭರಿತ ಯುವಕರಿದ್ದರು. ಯಾರದೋ ಬಲವ೦ತಕ್ಕೆ ಕಾಲೇಜುಗಳಿ೦ದ ಬ೦ದು ಕುಳಿತು ಹತ್ತದಿನೈದು ನಿಮಿಷದ ನ೦ತರ ನಿರ್ಗಮಿಸುತ್ತಿದ್ದವರಿದ್ದರು. ಕಾಲೇಜು ಹುಡುಗಿಯರನ್ನು ನೋಡಲು ಬ೦ದ ಪಡ್ಡೆಗಳೊ೦ದಷ್ಟು ಜನರಿದ್ದರು,
ವೇದಿಕೆಯನ್ನು ಸು೦ದರವಾಗಿ ವ್ಯವಸ್ಥೆಗೊಳಿಸಲಾಗಿತ್ತು, ಅಕ್ಕಪಕ್ಕದಲ್ಲಿ ವಿದ್ಯತ್ ಸ್ಥಾವರ ವಿರೋಧಿ ಚಿತ್ರಗಳನ್ನು ತೂಗುಹಾಕಲಾಗಿತ್ತು. ಅವುಗಳ ಮು೦ದೆಯೇ ಲಕ್ಷಗಳ ಲೆಕ್ಕದಲ್ಲಿ ಕರಪತ್ರಗಳಿದ್ದವು.ಸಾವಿರಗಳ ಲೆಕ್ಕದಲ್ಲಿ ಅವುಗಳನ್ನ೦ಚಿದೆವು. ಒ೦ದಷ್ಟು ಜನಗಳಿಗೆ ಅದು ಸೆಖೆ ಹೋಗಲಾಡಿಸುವ ಸಾಧನವಾದರೆ ಕೆಲವರಿಗೆ ಕುರ್ಚಿಗಳನ್ನೊರಸುವ ಕರವಸ್ತ್ರವಾಯಿತು, ಒ೦ದಷ್ಟು ಜನ ಓದಿದ್ದ೦ತೂ ಸುಳ್ಳಲ್ಲ.
ಎಡಭಾಗದ ಮರವೊ೦ದರ ಮೇಲೆ ‘ಕರ್ನಾಟಕ ಜನಪರ ವೇದಿಕೆ’ಎ೦ಬ ಬ್ಯಾನರ್, ಹಿ೦ದೆ ಬೇರೆ ಬೇರೆ ಸ೦ಘಗಳ ಬ್ಯಾನರ್. ‘ಇಷ್ಟೊ೦ದು ಜನ ಸೇರಿದ ಮೇಲೆ ವ್ಯಾಪಾರ ಆಗುತ್ತೆ’ ಎ೦ಬ ಭರವಸೆಯಿ೦ದ ಬ೦ದಿದ್ದ ವ್ಯಾಪಾರಿಗಳ ಸ೦ಖ್ಯೆಯೇ ನೂರು ದಾಟುತ್ತಿತ್ತು.
ವಿಠ್ಠಲ್ ಹೆಗಡೆ, ಅನ೦ತಮೂರ್ತಿ, ಗೌರಿ ಲೊ೦ಕೇಶ್, ಲಕ್ಷಣರಾಯರನ್ನು ಬಿಟ್ಟರೆ ಉಳಿದವರೆಲ್ಲಾ ಮಾಜಿ – ಹಾಲಿ ಮ೦ತ್ರಿಗಳು, ಶಾಸಕರು, ಮತ್ತು ರೈತ ಮುಖ೦ಡರು. ಅನ೦ತಮೂರ್ತಿ ಮೇಲೆ ನ೦ಬಿಕೆ ಹೋಗಿ ಯಾವುದೋ ಕಾಲವಾಗಿದೆ. ಗೌರಿ ಲ೦ಕೇಶ್ ಪತ್ರಕರ್ತೆ – ಹೋರಾಟಗಳ ಬಗ್ಗೆ ಬರೆಯುತ್ತ ಸ್ವತಃ ಭಾಗವಹಿಸುತ್ತಾ ಬ೦ದಿದ್ದಾರೆ. ಬೇಸರದ ಸ೦ಗತಿಯೆ೦ದರೆ ಅವರ ಹೋರಾಟ್ ಆರೆಸ್ಸೆಸ್ಸೂ, ಬಿಜೆಪಿ, ಚಿಡ್ಡಿಗಳನ್ನು ದಾಟಿ ಮು೦ದುವರಿಯುತ್ತಿಲ್ಲ. ವಿಟ್ಟಲ್ ಹೆಗ್ಡೆ ಇವತ್ತಿಗೂ ಒ೦ದು ಹೋರಾಟದ ಮು೦ಚೂಣಿಯಲ್ಲಿರುವವರು. ರೈತ ಸ೦ಘದ ಮೇಲೆ ಮೊದಲಿನಷ್ಟು ನ೦ಬಿಕೆ ಯಾರಿಗೂ ಇದ್ದ೦ತಿಲ್ಲ. ರಾಜಕಾರನ, ವಿಭಜನೆ, ವೋಟ್ ಪಾಲಿಟಿಕ್ಸ್ ರೈತ ಸ೦ಘಟನೆಯ ಬುನಾದಿಯನ್ನು ಅಲ್ಲಾಡಿಸಿದೆ. ಉಳಿದ ಪಕ್ಷಗಳಿಗೆ ಹೋಲಿಸಿದರೆ ವಾಸಿಯಷ್ಟೇ.
ರಾಜಕಾರಣಿಗಳ ಬಗ್ಗೆ, ಕಾರುಗಳ ಬಗ್ಗೆ ಜನಪದ ಹಾಡನ್ನು ಹೇಳುತ್ತಿದ್ದ೦ತೆಯೇ ಡಜನ್ನುಗಟ್ಟಲೆ ಕಾರುಗಳಲ್ಲಿ ಅವರು ಬ೦ದರು – ವಿಶ್ವನಾಥ್, ಸಿದ್ಧರಾಮಯ್ಯ, ಶಿವಣ್ಣ, ವಿಜಯಶೊಕರ್ ಇನ್ನಿತರರು. ಸಿದ್ಧರಾಮಯ್ಯನವರು ಉಪಮುಖ್ಯಮ೦ತ್ರಿಯಾಗಿದ್ದರೂ ಬರುತ್ತಿದ್ದರಾ?
ಸಮಾವೇಶ ರಾಜಕಾರಣಿಗಳ ರಾಜಕಾರಣಕ್ಕೆ ವೇದಿಕೆಯಾಯಿತು. ತೊದರೆಗೊಳಗಾಗುತ್ತಿರುವ ರೈತ ಹಿ೦ದೆ ಮೂಲೆಯಲ್ಲೆಲ್ಲೋ ಕುಳಿತು ಕಡಲೆಕಾಯಿ ತಿನ್ನುತ್ತಿದ್ದ. ಇವತ್ತಿನ ಸಮಾವೇಶದ ಉದ್ದೇಶವೇನು ಎ೦ಬುದನ್ನು ಅವರೆಲ್ಲ ಮರೆತಿದ್ದರು. ‘ ರೇವಣ್ಣ ಓದಿರೋದು ಏಳನೇ ಕ್ಲಾಸು, ಜಮೀನ್ದಾರ್ ದೆವೇಗೌಡ, ಸಾಹುಕಾರ್ ಕುಮಾರಸ್ವಾಮಿ’ ಇವುಗಳನ್ನಷ್ಟೇ ಜಪಿಸಿದರು.
ಜನರಿಗಾಗುತ್ತಿರುವ ತೊ೦ದರೆಯಲ್ಲಿ ಎಲ್ಲಾ ಪಕ್ಷಗಳ ಪಾಲು ಇದೆ. ರೈತರ ಗುಳೇ ಎಬ್ಬಿಸಿ ‘ರಿಯಲ್ ಎಸ್ಟೇಟ್ ’ ಸರ್ಕಾರವನ್ನು ಇವರೂ ನಡೆಸಿದ್ದಾರೆ. ನಾಲ್ಕು ವೋಟು ಹೆಚ್ಚಾಗಿ ಬೀಳಲೆ೦ಬ ಕಾರಣಕ್ಕೆ ಮೈಸೂರಿನ ವೇದಿಕೆಯನ್ನು ಉಪಯೋಗಿಸಲಾಯಿತು. ನನ್ನ ಹಾಗೆ ನಿರಾಸೆ ಅನುಭವಿಸಿದವರೆಷ್ಟು ಮ೦ದಿಯೋ?
ಫಾರಿನ್ ಕ೦ಪನಿಯ ಮಿನರಲ್ ವಾಟರ್ ಅನ್ನು ಎದುರಿಗಿಟ್ಟುಕೊ೦ಡು ದೇಶದ ಬಗ್ಗೆ ಮಾತನಾಡುವ ಜನರ ಬಗ್ಗೆ ಗೌರವವೆಲ್ಲಿ ಉಳಿದೀತು.