ನಕ್ಸಲ್ ವರ್ಗೀಸ್ ಹತ್ಯೆ:ಮಾಜಿ ಐಜಿಪಿ ದೋಷಿ
Posted by ajadhind on October 28, 2010
| ನಲ್ವತ್ತು ವರ್ಷಗಳ ಹಿಂದೆ ಪೊಲೀಸ್ ಕಾರ್ಯಾಚರಣೆ ವೇಳೆ ಹತನಾದ ನಕ್ಸಲ್ ಮುಂಖಡ ಎ. ವರ್ಗೀಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತೀರ್ಪು ಪ್ರಕಟಿಸಿರುವ ಸಿಬಿಐ ವಿಶೇಷ ನ್ಯಾಯಾಲಯ, ಮಾಜಿ ಪೊಲೀಸ್ ಮಹಾ ನಿರೀಕ್ಷಕ ಕೆ. ಲಕ್ಷ್ಮಣ ದೋಷಿ ಎಂದು ಹೇಳಿದೆ. ಶಿಕ್ಷೆ ಪ್ರಮಾಣವನ್ನು ಗುರುವಾರ ಪ್ರಕಟಿಸಲಿದೆ. | |
ಕೊಚ್ಚಿ (ಪಿಟಿಐ): ಆದರೆ, ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪಿ. ವಿಜಯನ್ ಅವರನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿದೆ. ವೈನಾಡ್ ಜಿಲ್ಲೆಯ ತಿರುವೆನಲ್ಲಿ ಅರಣ್ಯ ಪ್ರದೇಶದಲ್ಲಿ 1970ರ ಫೆ. 18ರಂದು ನಡೆದ ಎನ್ಕೌಂಟರ್ ಎನ್ನಲಾದ ಪ್ರಕರಣದಲ್ಲಿ ನಕ್ಸಲ್ ಮುಖಂಡ ವರ್ಗೀಸ್ನ ಹತ್ಯೆಯಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ‘ಆಗ ಪೊಲೀಸ್ ಉಪ ಅಧೀಕ್ಷಕರಾಗಿದ್ದ ಕೆ. ಲಕ್ಷ್ಮಣ ಅವರ ನಿದೇರ್ಶನದಂತೆ ಸಿಆರ್ಪಿಎಫ್ನ ಕಾನ್ಸ್ಸ್ಟೆಬಲ್ ಪಿ. ರಾಮಚಂದ್ರನ್ ನಾಯರ್, ವರ್ಗೀಸ್ನನ್ನು ಹತ್ಯೆ ಮಾಡಿದ್ದರು’ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ವಿಜಯಕುಮಾರ್ ತೀರ್ಪಿನಲ್ಲಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ರಾಮಚಂದ್ರ ನಾಯರ್ ಪ್ರಥಮ ಆರೋಪಿಯಾಗಿದ್ದು, ಅವರು ಮೃತರಾದ್ದಾರೆ. ಎರಡನೇ ಆರೋಪಿಯಾಗಿರುವ 80 ವರ್ಷ ವಯಸ್ಸಿನ ಕೆ. ಲಕ್ಷ್ಮಣ ಅವರನ್ನು ನ್ಯಾಯಾಲಯ ದೋಷಿ ಎಂದು ಪರಿಗಣಿಸಿದೆ. ಆದರೆ, ಪ್ರಕರಣದ 3ನೇ ಆರೋಪಿಯಾದ 83 ವರ್ಷ ವಯಸ್ಸಿನ ಪಿ. ವಿಜಯನ್ ಅವರನ್ನು ದೋಷಿ ಎನ್ನಲು ಸಾಕಷ್ಟು ಸಾಕ್ಷ್ಯಗಳು ಇಲ್ಲದ ಕಾರಣ ಅವರನ್ನು ಸಂಶಯದ ಲಾಭದ ಮೇಲೆ ನಿರ್ದೋಷಿ ಎಂದು ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಈ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳು ಇಂದು ಗಾಲಿ ಕುರ್ಚಿಯಲ್ಲಿ ಆಗಮಿಸಿದ್ದರು. ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸುತ್ತಿದಂತೆ ಕೆ. ಲಕ್ಷ್ಮಣ ಅವರನ್ನು ಎರ್ನಾಕುಲಂನ ಉಪ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಈ ಪ್ರಕರಣ ನಡೆದಾಗ ಕೋಯಿಕೋಡ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಜಯನ್, ತೀರ್ಪಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಕೆ. ಲಕ್ಷ್ಮಣ ಮತ್ತು ಪಿ. ವಿಜಯನ್ ಅವರ ಆದೇಶದಂತೆ ವರ್ಗೀಸ್ನನ್ನು ಗುಂಡಿಕ್ಕಿ ಕೊಂದೆ ಎಂದು ಈ ಪ್ರಕರಣದ ಮೊದಲ ಆರೋಪಿ ರಾಮಚಂದ್ರನ್ ನಾಯರ್ 1998ರಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಇದರಿಂದ ಈ ಪ್ರಕರಣ ಬಹುದೊಡ್ಡ ಸುದ್ದಿಯಾಗಿ ಕುತೂಹಲ ಕೆರಳಿಸಿತ್ತು. |
|